Sunday, October 23, 2016

ಮಳೆಯಲ್ಲಿ ಸದೃಢ

2009 ರಲ್ಲಿ ಜಪಾನಿನಲ್ಲಿದ್ದಾಗ ಹನಮಕಿ ( ಇವಾತೆ) ಯಲ್ಲಿರುವ ಕೆಂಜಿ ಮಿಯಾಜವ ( Kenji Miyazava) ನೆನಪಿನ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದೆ. ಕೆಂಜಿಯವರ ಕವನ ಸಂಕಲನವೊಂದನ್ನು ಅಲ್ಲಿಂದ ತಂದು ಹಾಗೆಯೇ ಇಟ್ಟಿದ್ದೆ. ಕೆಂಜಿಯವರು 40 ನೇ ವಯಸ್ಸಿಗೇ ತೀರಿಕೊಂಡ ( 1896-1936) ಪ್ರತಿಭಾವಂತ ಕವಿ. ಅವರ ಒಂದುು ಕವನವನ್ನು ಕಾವ್ಯ ಪ್ರೇಮಿಗಳಿಗಾಗಿ ಅನುವಾದಿಸಿದ್ದೇನೆ-
ಮಳೆಯಲ್ಲಿ ಸದೃಢ (ಮೂಲ: ಮಿಯಜವ ಕೆಂಜಿ)
ಮಳೆಯಲ್ಲಿ ಸದೃಢ, ಗಾಳಿಯ ವಿರುದ್ಧ ಬಲಶಾಲಿ
ಹಿಮಕ್ಕೆಂದೂ ಬಲಿಯಾಗದವ ಅಥವಾ ಬೇಸಗೆಯ ಬೇಗೆಗೆ
ಆರೋಗ್ಯಕರ ಅವನ ದೇಹ, ಎಲ್ಲ ಬಯಕೆಗಳಿಂದ ಮುಕ್ತ
ಕಳಕೊಳ್ಳನವ ತನ್ನ ಭಾವೋದ್ವೇಗವನು ಮತ್ತು ಮುಗುಳ್ನಗೆಯ
ದಿನಕೆ ಕೇವಲ ನಾಲ್ಕು ಗಿಣ್ಣಲು ಕುಚಿಲಕ್ಕಿ ಅವನಿಗೆ ಬೇಕಾದುದು
ಮಿಸೋ ಮತ್ತು ಸ್ವಲ್ಪ ತರಕಾರಿ
ತನ್ನ ಉದ್ವೇಗ ಹಾಗೂ ಭಾವೋತ್ಕಟತೆಗಳ ಅಲಕ್ಷಿಸುತ್ತಾನೆ ಅವನು
ಕಿವಿಗೊಡುತ್ತಾನೆ ಇತರರಿಗೆ,
ಚೆನ್ನಾಗಿ ತಿಳಿದುಕೊಳ್ಳುತ್ತಾನೆ ಅವರನು
ಅವರು ಹೇಳಿದುದನೆಂದೂ ಮರೆಯದಿರುತ್ತಾನೆ
ಬದುಕುತ್ತಾನೆ ಅವನು ಪೈನ್ ಮರದ ಕಾಡಿನ ನೆರಳಿನ
ಹುಲ್ಲು ಚಾವಣಿಯ ಗುಡಿಸಲಲಿ
ರೋಗಿಷ್ಠ ಮಗುವಿದ್ದರೆ ಮೂಡಣದಲಿ
ತೆರಳಿ ಅಲ್ಲಿಗೆ ಆರೈಕೆ ಮಾಡುತ್ತಾನೆ ಅವನು
ದಣಿದ ತಾಯಿಯಿದ್ದರೆ ಪಡುವಣದಲಿ
ಹೋಗಿ ಅಲ್ಲಿಗೆ ಅವಳ ಮೂಟೆಗಳ ಹೊರುತ್ತಾನೆ.
ಯಾರಾದರೂ ಸಾವಿನ ಹಾಸುಗೆಯಲ್ಲಿದ್ದರೆ ತೆಂಕಣದಲಿ
ಅಲ್ಲಿಗೆ ನಡೆದು ಹೆದರದಿರೆಂಬ ಆಶ್ವಾಸನೆ ನೀಡುತ್ತಾನೆ ಅವನು
ಏನಾದರೂ ಜಗಳ ಅಥವಾ ಮೊಕದ್ದಮೆಗಳಿದ್ದರೆ ಬಡಗಿನಲಿ
ಅಪ್ಪಣೆ ಕೊಡಿಸುತ್ತಾನೆ ಅವನು ಬಿಡುವಂತೆ ಗುಂಪುಗಳು ಜಗಳಗಳನು
ಅಳುತ್ತಾನೆ ಅವನು ಬರಗಾಲದಲಿ
ತಣ್ಣನೆಯ ಬೇಸಗೆಯಲಿ ಚಡಪಡಿಸುತ್ತಾ ಅಡ್ಡಾಡುತ್ತಾನೆ ಅವನು
ಪೆದ್ದನೆಂದು ಕರೆಯುತ್ತಾರೆ ಜನರು ಅವನನ್ನು
ಹೊಗಳುವುದಿಲ್ಲ ಯಾರೂ ಅಥವಾ ತಲೆಕೆಡಿಸಿಕೊಳ್ಳುವುದಿಲ್ಲ ಅವನ ಬಗೆಗೆ
ಅವನಂತಾಗಬೇಕು ನಾನು

No comments: