Tuesday, February 12, 2019

ಇಂಗ್ಲಿಷಿನಲ್ಲಿ ರನ್ನನ ಗದಾಯುದ್ಧಂ ಬಿಡುಗಡೆ



ಕನ್ನಡ ಅಧ್ಯಯನ ಪೀಠ
ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ
ನವದೆಹಲಿ -110067


ಇಂಗ್ಲಿಷಿನಲ್ಲಿ ರನ್ನನ ಗದಾಯುದ್ಧಂ ಬಿಡುಗಡೆ

ಪಠ್ಯಗಳು ಬದುಕುಳಿಯುವ ಚೋದ್ಯದ ಕುರಿತೊಂದು ಚಿಂತನೆ :

ಶ್ರೀವಿಜಯನ ಕವಿರಾಜಮಾರ್ಗ ಕೃತಿಯನ್ನು ಯಶಸ್ವಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಜೆ ಎನ್ ಯು ಕನ್ನಡ ಅಧ್ಯಯನ ಪೀಠವು ಇದೀಗ 10ನೇ ಶತಮಾನದ ಶಕ್ತಿಶಾಲೀ ಕವಿ ರನ್ನನ ಗದಾಯುದ್ಧಂ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿ, ಇದೇ ಫೆಬ್ರವರಿ 16ರಂದು ಜೆ ಎನ್ ಯು ವಿನ ಮುಖ್ಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಬಹುಭಾಷಾ ವಿಶಾರದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಅಮ್ಮೇಲ್ ಶೆರೋನ್ ಅವರು ಕೃತಿಯನ್ನು ಅನುವಾದ ಮಾಡಿದ್ದಾರೆ. ಪ್ರೊ. ಅಕ್ಕಮಹಾದೇವಿ ಅವರು ಸಂಪಾದನಾ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕನ್ನಡ ಪೀಠ ಮತ್ತು ದೆಹಲಿಯ ಮನೋಹರ ಪ್ರಕಾಶನದವರು ಜಂಟಿಯಾಗಿ ಪುಸ್ತಕವನ್ನು ಹೊರತಂದಿದ್ದಾರೆ.

ಹೊಸ ರೀತಿಯಲ್ಲಿ ಬಿಡುಗಡೆ: 

ಕನ್ನಡ ಅಭಿಜಾತ ಪರಂಪರೆಯ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ  ‘ ಜಂಗಮ ಜನಾರ್ಧನರ’ನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನಾರ್ಧನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿ ಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಮುಂದೆ ಹರಿಕತಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಮುಂದೆ 17 ಮತ್ತು 18ನೇ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ  ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು, ಅವುಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ  ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ಕಾವ್ಯಗಳು ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು.  ಅವುಗಳನ್ನು ಲಕ್ಷಾಂತರ ಜನ ನೊಡುವಂತಾಯಿತು.

ಈ ಚಿಂತನಾಕ್ರಮವನ್ನು ಆಧರಿಸಿ ಗದಾಯುದ್ಧ ಪುಸ್ತಕ ಬಿಡುಗಡೆಯನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಆ ದಿನ ರನ್ನನ ಗದಾಯುದ್ಧದ ಕೃತಿಯ ಇಂಗ್ಲಿಷ್ ಅನುವಾದವನ್ನು ಪ್ರಾಧ್ಯಾಪಕರಾದ ಪ್ರೊ. ವೆಂಕಟಾಚಲ ಹೆಗಡೆ ಅವರು ಬಿಡುಗಡೆಗೊಳಿಸಲಿದ್ದಾರೆ. ಅನುವಾದಕರಾದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮ್ಮೇಲ್  ಶೆರೋನ್ ಅವರು ಮೂಲಕೃತಿ ಹಾಗೂ ಅನುವಾದದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ವಿಜಯಪುರದ ಶ್ರೀ ಕೃಷ್ಣ ಕೊಲ್ಲಾರ ಕುಲಕರ್ಣಿ ಹಾಗೂ ಬೆಂಗಳೂರಿನ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ರನ್ನನ ಗದಾಯುದ್ಧವನ್ನು ಗಮಕದಲ್ಲಿ ಪ್ರಸ್ತುತ ಪಡಿಸಿದರೆ,  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದರಾದ ಡಾ. ಲಕ್ಷ್ಮಣದಾಸರು ತಮ್ಮ ತಂಡದೊಂದಿಗೆ ಗದಾಯುದ್ಧವನ್ನು ಹರಿಕತೆ ರೂಪದಲ್ಲಿ  ಮಂಡಿಸಲಿದ್ದಾರೆ. ಕೊನೆಯಲ್ಲಿ ಪ್ರಖ್ಯಾತವಾದ ಕೆರೆಮನೆ ಇಡಗುಂಜಿ ಮೇಳದ ಕಲಾವಿದರು ಗದಾಯುದ್ಧ ಯಕ್ಷಗಾನ ಪ್ರಸಂಗವನ್ನೂ ಪ್ರದರ್ಶಿಸಲಿದ್ದಾರೆ. 1930ರಷ್ಟು ಹಿಂದೆ ಅರ್ನಾಲ್ಡ್ ಬಾಕೆಯು ದಾಖಲಿಸಿದ ಗದಾಯುದ್ಧದ ಓದಿನ ಕ್ರಮವನ್ನೂ ಪ್ರಸ್ತುತಪಡಿಸಲಾಗುವುದು.

ಹೀಗೆ 10ನೇ ಶತಮಾನದ ಒಂದು ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತಾ  ಇವತ್ತಿನ ವರೆಗೆ ಬದುಕುಳಿದ ಬಗೆಯ ಚೋದ್ಯವನ್ನು  ಸಾಕ್ಷಾತ್ಕರಿಸಿಕೊಳ್ಳುವುದು ಕಾರ್ಯಕ್ರಮದಉದ್ಧೇಶ. ಸಂಶೋಧಕರಿಗೆ ಪ್ರಸ್ತುತಗೊಳಿಸಲಾಗುವುದು. ಅಭಿಜಾತ ಕೃತಿಗಳನ್ನು ಅಧ್ಯಯನ ಮಾಡುವ ಸುಮಾರು 250 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


 ಪುರುಷೋತ್ತಮ ಬಿಳಿಮಲೆ,

No comments: