Sunday, December 18, 2011

Katrin Binder

Katrin Binder, a doctoral scholar of Indology and currently teaching Kannada at Wurzburg University, Germany arrived in New Delhi on her way to Udupi in Karnataka, spent a quite evening of winter sharing her thoughts and experiences among some Yakshagana enthusiasts on 17 Dec 2011.
Read detailed report in http://www.kempukote.blogspot.com/

Tuesday, December 13, 2011


Delhi Karnataka Sangha

Rao Tula Ram Marg

Sector 12, RK Puram

New Delhi

Cordially invite you to a special lecture by

Dr. Katrin Binder

Department of Indology, Wurzburg University, Germany

On

Yakshaganapriya :

Impressions and experiences of a foreigner who fell in love with Yakshagana

On December 17, 2011 at 4 pm at Sangha Seminar Hall


Dr. Katrin Binder is currently teaching Kannada at Wurzburg University, Germany. She was a DAAD/ ICCR Fellow during 2001-2002 and has done an Intensive field work on ‘Abhimanyu Kalaga’. During 2008, she has submitted her Ph. D thesis on the subject “ Yakshgana Rangabhumi”

Dr. Katrin has learned and performed Yakshagana under Guru Sanjeeva Suvarna, at Yakshagana Kendra, Udupi. Her other areas of work are modern Kannada literature and drama, history of Basel Mission in Karnataka

Sunday, October 16, 2011

ಅಮವಾಸ್ಯೆ ಜಾತಕ ಮತ್ತು ನನ್ನ ಶಾಲೆ


ನಾನು ಒಂದು ಆದಿತ್ಯವಾರ, ಅಮವಾಸ್ಯೆಯ ದಿವಸ ರಣ ರಣ ಮಧ್ಯಾಹ್ನ ಜನಿಸಿದೆನಂತೆ. ನನ್ನ ತಂದೆ-ತಾಯಿಯರಿಗೆ ನಾನು ಮೂರನೇ ಮಗು, ಮೊದಲನೆಯದೆರಡು ಗಂಡಾಗಿದ್ದರಿಂದ ಸಹಜವಾಗಿ ಅವರಿಗೆ ಮೂರನೆಯದು ಹೆಣ್ಣಾಗಬೇಕೆಂಬ ಆಸೆ ಇತ್ತು. ಆದರೆ ಅವರ ನಿರೀಕ್ಷೆಗೂ ಮೀರಿ, ಅದೂ ಅಮವಾಸ್ಯೆಯ ದಿನ ಮಧ್ಯಾಹ್ನ ನಾನು ಹುಟ್ಟಿಬಿಟ್ಟೆ. ಹಾಗೆ ನಾನು ಹುಟ್ಟುವಾಗ ತಂದೆ-ತಾಯಿಯರಿಗೆ ಅವರದ್ದೇ ಆದ ನೆಲ, ಮನೆ, ಬದುಕು ಯಾವುದೂ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹೀಗೆ ಹುಟ್ಟಿದ ಮಗುವಿನ ಭವಿಷ್ಯ ಹೇಗಿರಬಹುದೆಂಬ ಕುತೂಹಲದಿಂದ ತಂದೆಯವರು ಕೇರಳ ಕರ್ನಾಟಕ ಗಡಿಭಾಗದ ಜ್ಯೋತಿಷಿಯೊಬ್ಬನಿಂದ ನನ್ನ ಜಾತಕ ಬರೆಯಿಸಿದರು. ಆತ ಯಥಾಪ್ರಕಾರ ಹುಟ್ಟಿದ ಕ್ಷಣದ ಎಲ್ಲ ಗ್ರಹಗಳನ್ನು ಕರಾರುವಾಕ್ಕಾಗಿ ಕಂಡು ಹಿಡಿದು "ಈ ಜಾತಕನಿಗೆ ವಿದ್ಯಾಯೋಗವಿಲ್ಲವು" ಎಂದು ಬರೆದು ಬಿಟ್ಟ. ತಂದೆ ಕಂಗಾಲಾಗಿರಬೇಕು.
ನಮ್ಮ ತಂದೆಗೆ ಯಕ್ಷಗಾನ ನೋಡುವ, ಅದರಲ್ಲಿ ಆಗೀಗ ವೇಷ ಹಾಕುವ, ತಾಳಮದ್ದಳೆಯಲ್ಲಿ ಕುಳಿತು ಅರ್ಥ ಹೇಳುವ ಹುಚ್ಚಿತ್ತು. ಅದರಿಂದಾಗಿ ಅವರ ಲೋಕಜ್ಞಾನ ಸಾಕಷ್ಟು ವಿಸ್ತಾರವಾಗಿತ್ತು. ಹೀಗಾಗಿ ಮಕ್ಕಳು ಚೆನ್ನಾಗಿ ಓದಿದರೆ, ಭಯಾನಕ ಬಡತನ ಮತ್ತು ಶೋಷಣೆಗಳಿಂದ ಪಾರಾಗಿಬಿಡಬಹುದು ಎಂಬ ಸರಳ ತಿಳಿವಳಿಕೆ ಅವರಿಗಿತ್ತು. ಆದರೇನು ಮಾಡೋಣ? ಜಾತಕದಲ್ಲಿ ವಿದ್ಯಾಯೋಗ ಇಲ್ಲವೆಂದು ಬರೆದಾಗಿದೆಯಲ್ಲ? ಆದರೆ ನನ್ನ ಅಮ್ಮನ ತರ್ಕ ಯಾವಾಗಲೂ ಅಪ್ಪನಿಗಿಂತ ಬೇರೆ. ’ಜಾತಕ ಹೇಗಾದರೂ ಇರಲಿ, ನಾವು ಮಾಡುವ ಪ್ರಯತ್ನ ಮಾಡಲೇಬೇಕು’, ಎಂಬುದು ಅವಳ ವಾದ. ಹಾಗೂ ಹೀಗೂ ಐದು ವರ್ಷ ಕಳೆದು ಆರನೇ ವರ್ಷಕ್ಕೆ ಕಾಲಿಡುವಾಗ ಮಗನನ್ನು ಶಾಲೆಗೆ ಸೇರಿಸುವುದೋ ಬಿಡುವುದೋ ಎಂಬ ಬಗ್ಗೆ ತಂದೆ-ತಾಯಿಯರ ನಡುವೆ ಸಾಕಷ್ಟು ವಾದ-ವಿವಾದ ಬೆಳೆದು ಕೊನೆಗೂ ಶಾಲೆಗೆ ಸೇರಿಸುವುದೆಂದು ನಿರ್ಧರಿಸಲಾಯಿತು. ಈ ವಾದ ವಿವಾದಗಳೆಲ್ಲ ನನಗಿನ್ನೂ ನೆನಪಿದೆ. ಆಗ ನಾವೆಲ್ಲ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವಣ ’ವಾಟೆಕಜೆ’ ಎಂಬ ಸ್ಥಳದಲ್ಲಿದ್ದೆವು. ಆ ಕಾಡಲ್ಲಿ ನಮ್ಮದೊಂದೇ ಮನೆ. ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರ ಕಾಡಲ್ಲಿ ಇಳಿಯುತ್ತಾ ನಡೆದರೆ, ( ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ ಉರುಳು....) ಅಲ್ಲೊಂದು ಧುಮ್ಮಿಕ್ಕಿ ಹರಿಯುವ ಹೊಳೆಯಿದೆ. ಆ ಹೊಳೆಯ ನಡುವಣ ಬಂಡೆಗಳನ್ನು ಚಾಕಚಕ್ಯತೆಯಿಂದ ಹಾರಿ ಹೊಳೆ ದಾಟಿ ಮುಂದೆ ಸುಮಾರು ಮೂರು ಕಿ.ಮೀ. ದೂರ ನಡೆದರೆ ಅಲ್ಲೊಂದು ಶಾಲೆ. ಆ ಶಾಲೆಗೆ ಸೇರುವುದು ನನಗೂ ಆಸೆ. ಬೇರೆ ಮನುಷ್ಯರನ್ನು ನೋಡಲಿರುವ ಏಕೈಕ ಸ್ಥಳವದು.
ಸರಿ. ಶಾಲೆಗೆ ಹೊರಡುವ ಸಕಲ ಸಿದ್ಧತೆಗಳಾದವು. ಜೂನ್ ತಿಂಗಳ ಒಂದು ಮುಂಜಾನೆ ಅಪ್ಪ ನನ್ನನ್ನು ಪಂಜ ಎಂಬ ನಾಲ್ಕಂಗಡಿಗಳ ಪೇಟೆಗೆ ಕರೆದೊಯ್ದರು. ಆ ಪೇಟೆ ಆಗ ನನಗೆ ಮಾಯಾನಗರಿ ಎಂಬಂತೆ ಕಾಣತೊಡಗಿತ್ತು. ಆಲ್ಲಿಯ ’ಮರಿಯಾ ಮಹಲ್’ ಎಂಬ ಅಂಗಡಿಯಲ್ಲಿ ಕುಳಿತಿದ್ದ ದರ್ಜಿಯ ಬಳಿ ಕರೆದೊಯ್ದ ನನ್ನ ತಂದೆ, ’ಈತ ಶಾಲೆ ಸೇರುವವನಿದ್ದಾನೆ. ಇವನಿಗೆ ಎಷ್ಟು ಸಲ ಹಾಕಿದರೂ ಹರಿದು ಹೋಗದಂಥ ದಪ್ಪ ಬಟ್ಟೆಯೊಂದರಿಂದ ಅಂಗಿಯೂ, ಅದಕ್ಕಿಂತ ಇನ್ನೂ ಸ್ವಲ್ಪ ದಪ್ಪದ ಬಟ್ಟೆಯಿಂದ ಚೆಡ್ಡಿಯೊಂದನ್ನು ಹೊಲಿದುಕೊಡಬೇಕೆಂದೂ’ ಕೇಳಿಕೊಂಡರು. ಜೊತೆಗೆ ಸುಮಾರು ೧೦ ಕಿ.ಮೀ. ದಿನನಿತ್ಯ ನಡೆದು ಚೀಲ ಹೆಗಲಿಗೇರಿಸಿಕೊಂಡು ಶಾಲೆಗೆ ಹೋಗಬೇಕಾಗಿರುವುದರಿಂದ ಅಂಗಿಯ ಹೆಗಲ ಭಾಗದಲ್ಲಿ ಅದು ಬೇಗ ಹರಿದು ಹೋಗಿ ಬಿಡುವ ಸಾಧ್ಯತೆ ಇರುವುದರಿಂದ, ಆ ಭಾಗಗಳಲ್ಲಿ ಒಂದೆರಡು ಪಟ್ಟಿ ಹೆಚ್ಚಿಗೆ ಇರಿಸಬೇಕೆಂದೂ ಹೇಳಿದರು. ಎಷ್ಟು ಮಣ್ಣಾದರೂ ಕಾಣಬಾರದೆಂಬ ಉದ್ದೇಶದಿಂದ ಮಣ್ಣಿನ ಬಣ್ಣವನ್ನೇ ಆರಿಸಲಾಯಿತು. ಅಂಗಿ-ಚೆಡ್ಡಿ ಸಿದ್ಧವಾಗುವ ಹೊತ್ತಿಗೆ ಅಪ್ಪ ಮತ್ತೆ ಆ ಜಾತಕ ಬರೆದ ಪುಣ್ಯಾತ್ಮನಲ್ಲಿಗೆ ಹೋಗಿ "ಹೇಗೂ ಮಗನಿಗೆ ವಿದ್ಯಾಯೋಗ ಇಲ್ಲ. ಆದರೂ ಜಾತಕ ನೋಡಿ ಒಳ್ಳೆ ದಿನ ಗೊತ್ತು ಮಾಡಿಕೊಡಿರಿ" ಎಂದು ಬೇಡಿಕೊಂಡ ಪ್ರಕಾರ ಆತ ಆಗಸ್ಟ್ ತಿಂಗಳಲ್ಲಿ ಒಂದು ದಿನ ಗೊತ್ತು ಮಾಡಿಕೊಟ್ಟು, ’ಒಳ್ಳೆಯದಾಗಲಿ’ ಎಂದು ಹರಸಿದ.
ನಿರೀಕ್ಷಿಸಿದಂತೆ ಶಾಲೆಗೆ ಸೇರುವ ಮುನ್ನಾ ದಿನ ಹೊಸ ಅಂಗಿ-ಚೆಡ್ಡಿ ಬಂತು. ಆದರೆ ಅದಕ್ಕೆ ಆತ ಇಸ್ತ್ರಿ ಮಾಡಿರಲಿಲ್ಲ. ಇಸ್ತ್ರಿ ಹಾಕಿದ ಅಂಗಿ ಹೇಗೆ ಗರಿ ಗರಿಯಾಗಿ ಇರುತ್ತದೆ ಎಂಬುದನ್ನು ಪಂಜದ ಜಾತ್ರೆಯಲ್ಲಿ ನೋಡಿದ್ದ ನನಗೆ ಒಂದು ಉಪಾಯ ಹೊಳೆಯಿತು. ನಾನೇ ಅಂಗಿ-ಚೆಡ್ಡಿಗಳನ್ನು ಚೆನ್ನಾಗಿ ಮಡಚಿದೆ. ಪಂಜದಿಂದ ಆಗೀಗ ಅಪ್ಪ ತರುತ್ತಿದ್ದ ಆಗಣ ’ನವಭಾರತ’ ಪತ್ರಿಕೆಯಲ್ಲಿ ಅದನ್ನು ಇರಿಸಿ, ಸ್ವಲ್ಪ ಸ್ಥೂಲ ಕಾಯಕರಾಗಿದ್ದ ಅಪ್ಪನನ್ನು ಅದರ ಮೇಲೆ ಕುಳಿತುಕೊಳ್ಳಲು ವಿನಂತಿಸಿಕೊಂಡೆ. ಅದಕ್ಕೊಪ್ಪಿದ ಅಪ್ಪ ಸಮಯ ಸಿಕ್ಕಾಗಲೆಲ್ಲ ಅದರ ಮೇಲೆ ಕುಳಿತು ’ಕುಂಡೆ ಇಸ್ತ್ರಿ’ಗೆ ಸಹಕರಿಸಿದರು.
ಆ ದಿನ ಶಾಲೆಗೆ ಹೊರಡಲು ಸಿದ್ಧನಾದೆ. ಎಲ್ಲಕ್ಕಿಂತ ಕಾತರ ಅಮ್ಮನದಾಗಿತ್ತು. ’ಮಗುವನ್ನು ಶಾಲೆವರೆಗೂ ಕರೆದುಕೊಂಡು ಹೋಗಬೇಕು. ಅವ ಹಿಂದೆ ಬರುವಾಗ ಹೊಳೆವರೆಗೆ ಬರಲಿ, ಹೊಳೆದಾಟಿಸಲು ನಾನಿದ್ದೇನೆ’ ಅಂತ ಅಪ್ಪನಿಗೆ ಹೇಳಿದರು. ನಾನು ನವಭಾರತದ ಕಟ್ಟೊಳಗಿಂದ ಅಂಗಿ-ಚೆಡ್ಡಿಗಳನ್ನು ತೆಗೆಯತೊಡಗಿದ್ದಂತೆ ನನ್ನ ಕೈಕಾಲುಗಳೆಲ್ಲ ತಣ್ಣಗಾಗಿಬಿಟ್ಟಿತು. ಅಪ್ಪನ ಕುಂಡೆ ಇಸ್ತ್ರಿಯ ಪರಿಣಾಮವಾಗಿ ನವಭಾರತ ಪತ್ರಿಕೆಯ ಅಕ್ಷರಗಳೆಲ್ಲ ನನ್ನ ಹೊಸ ಅಂಗಿಯ ಮೇಲೆ ಅಕರಾಳ-ವಿಕರಾಳವಾಗಿ ಮೂಡಿ ಹೊಸ ವಿನ್ಯಾಸವೊಂದು ಸಿದ್ಧಗೊಂಡಿತ್ತು. ಬಳಬಳನೆ ಕಣ್ಣೀರು ಉರುಳತೊಡಗಿತು. ಮೆಲ್ಲನೆ ಅಂಗಿಯ ಮೇಲೆ ಕೈಯಾಡಿಸಿದೆ. ಪತ್ರಿಕೆಯ ಶಾಯಿ ಇನ್ನಷ್ಟು ಹರಡಿಕೊಂಡಿತು. "ನಿನ್ನ ಹಣೆಯಲ್ಲಿ ವಿದ್ಯೆ ಬರೆದಿಲ್ಲ" ಎಂಬ ಅಪ್ಪನ ಉದ್ಗಾರ ಸ್ವಲ್ಪ ಗಡುಸಾಗಿಯೇ ಕೇಳಿತು.
ಏನಿದ್ದರೂ ಅಂಗಿಯ ಭುಜದ ಭಾಗ ದಪ್ಪಗಾಗಿ ಸುಮಾರಾಗಿ ನನ್ನ ಕಿವಿವರೆಗೆ ತಲುಪಿ ನಿಂತಿತ್ತು. ಚೆಡ್ಡಿ ಕಾಣದಂತೆ ಅಂಗಿ ಮೊಣಕಾಲಿನವರೆಗೆ ಚಾಚಿಕೊಂಡಿತ್ತು. ಅಮ್ಮ ಕೊಟ್ಟ ಚೀಲ ಹೆಗಲಿಗೇರಿಸಿ, ಗೊರಬೆಯೊಳಗೆ ನಿಂತೆ. ಆ ಗೊರಬೆ ನನ್ನ ಸೈಜಿನದಾಗಿರಲಿಲ್ಲವಾಗಿದ್ದರಿಂದ ತಲೆಯ ಮೇಲಿಂದ ಕೆಳಗಿನವರೆಗೆ ಚಾಚಿಕೊಂಡು ನಡೆದಾಗ ನೆಲಕ್ಕೆ ತಾಗಿ ಬರ ಬರನೆ ಸದ್ದು ಮಾಡುತ್ತಿತ್ತು. ಸ್ವಲ್ಪ ಬಗ್ಗಿದರೆ ಗೊರಬೆಯ ಹಿಂಭಾಗ ಮೇಲಕ್ಕೇಳುತ್ತಿತ್ತು, ಹಾಗಾಗಿ ಬೆನ್ನು ಬಗ್ಗಿಸಿ ನಡೆಯುವುದು ಅನಿವಾರ್ಯವಾಗಿತ್ತು. ಹೇಗೋ ಸುಧಾರಿಸಿಕೊಂಡು, ಒಂದು ಕೈಯಲ್ಲಿ ಬುತ್ತಿ, ಇನ್ನೊಂದು ಕೈಯಲ್ಲಿ ಮೈಮೇಲೇರುವ ಜಿಗಣೆಗಳನ್ನು ಉದುರಿಸಲು ಬಟ್ಟೆಯಲ್ಲಿ ಕಟ್ಟಿಕೊಂಡ ಉಪ್ಪು, ಹೆಗಲ ಮೇಲೆ ಚೀಲ, ತಲೆಯ ಮೇಲೆ ಗೊರಬೆ ಇರಿಸಿಕೊಂಡು, ಅಪ್ಪನ ಹಿಂದೆ ಹೆಜ್ಜೆ ಹಾಕುತ್ತಾ ಸುಮಾರು ೫ ಕಿ.ಮೀ. ನಡೆದು ೧೨ ಗಂಟೆ ಸುಮಾರಿಗೆ ಶಾಲೆಗೆ ತಲುಪಿದೆ.
ಜಾತಕ ಬರೆದ ಜೋಯಿಸರು ತಿಳಿಸಿದಂತೆ ಆ ದಿವಸ ಬಹಳ ಒಳ್ಳೆಯ ದಿವಸವಾಗಿತ್ತು. ಆ ಕಾರಣಕ್ಕಾಗಿಯೇ ಶಾಲೆಗೆ ರಜೆ ಸಾರಲಾಗಿತ್ತು! ಅಪ್ಪ ದಿಗ್ಭ್ರಾಂತರಾಗಿದ್ದರು. ನನಗೇನೂ ತೋಚಲಿಲ್ಲ. ನನ್ನನ್ನು ಮನೆಗೆ ಹಿಂದಿರುಗಲು ಹೇಳಿ ಅಪ್ಪ ಪಂಜದ ಕಡೆ ನಡೆದರು. ನಾನು ಮನೆ ಕಡೆಗೆ ಹಿಂದಿರುಗಿದೆ.
ನಿರೀಕ್ಷಗೂ ಮುನ್ನ ಒಂಟಿಯಾಗಿಯೇ ಮನೆಗೆ ಹಿಂದಿರುಗಿದ ನನ್ನನ್ನು ಕಂಡ ಅಮ್ಮನ ಕಣ್ಣಲ್ಲಿ ನೀರು. ಈಗ ಅಪ್ಪ ಅಮ್ಮ ಇಬ್ಬರೂ ಇಲ್ಲ. ಜಾತಕ ಬರೆದ ಜೋಯಿಸರೂ ಇಲ್ಲ. ನನಗೆ ಇವನ್ನೆಲ್ಲ ಬರೆಯುವಷ್ಟು ವಿದ್ಯೆ ಸಿಕ್ಕಿದೆ. ಜಾತಕ ಅನಾಥವಾಗಿ ಬಿದ್ದುಕೊಂಡಿದೆ
Published in Vijayakarnataka paper on October16, 2011


Thursday, October 13, 2011

ಓದುಗ - ಕೇಳುಗ - ನೋಡುಗ

ವಿದ್ಯಾರ್ಥಿ ಆನಂತರ ಅಧ್ಯಾಪಕನಾಗಿದ್ದ ಸಮಯದಲ್ಲಿ ನಾನು ಬಗೆ ಬಗೆಯ ಸಾಹಿತ್ಯ ಚರಿತ್ರೆಗಳನ್ನು ಓದಿದ್ದೆ. ಅವುಗಳಲ್ಲಿ ಕಾದಂಬರಿಯ ಹಾಗೆ ಓದಿಸಿಕೊಂಡು ಹೋಗುವ ರಂ. ಶ್ರೀ. ಮುಗಳಿ ಅವರ ಸಾಹಿತ್ಯ ಚರಿತ್ರೆ ಆಗ ನಮಗೆಲ್ಲಾ ಇಷ್ಟವಾಗಿತ್ತು. ಇವುಗಳ ಜೊತೆಗೆ ತ. ಸು. ಶಾಮರಾಯ, ಎಂ. ಮರಿಯಪ್ಪ ಭಟ್, ಸಿ. ವೀರಣ್ಣ ಮೊದಲಾದವರು ಬರೆದ ಬಗೆ ಬಗೆಯ ಸಾಹಿತ್ಯ ಚರಿತ್ರೆಗಳನ್ನೂ ಓದುತ್ತಿದ್ದೆವು. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಸಿದ್ಧಪಡಿಸಿದ ಸಾಹಿತ್ಯ ಚರಿತ್ರೆಯ ಬೃಹತ್ ಸಂಪುಟಗಳೂ ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸಿವೆ ಎಂದು ನಾನು ಭಾವಿಸುತ್ತೇನೆ. ಆದರೆ, ಯಾಕೋ ಈಚೆಗೆ ಸಾಹಿತ್ಯ ಚರಿತ್ರೆಯ ಸಂಪುಟಗಳೇ ಬರುತ್ತಿಲ್ಲ.

ಇರಲಿ, ಈಗ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಸಂಪುಟಗಳು ಒಂದೇ ಬಗೆಯಲ್ಲಿ ರಚಿತವಾಗಿವೆ ಎಂದು ಈಗ ಅನ್ನಿಸುತ್ತದೆ. ಅವು ಕವಿಯ ಕಾಲ, ದೇಶ, ಕುಟುಂಬದ ವಿವರಗಳನ್ನು ನೀಡುವುದರ ಜೊತೆಗೆ ಕವಿಯ ಕೃತಿಗಳ ಬಗೆಗೆ ಸಂಕ್ಷಿಪ್ತವಾಗಿಯೋ ಇಲ್ಲ ಸವಿವರವಾಗಿಯೋ ವಿವರ ನೀಡುತ್ತವೆ. ಬಹುಮಟ್ಟಿಗೆ ವಡ್ಡಾರಾಧನೆಯಿಂದ ಆರಂಭವಾಗುವ ಕನ್ನಡ ಸಾಹಿತ್ಯ ಚರಿತ್ರೆಯು ಮೈಸೂರು ಅರಸರ ಕಾಲದಲ್ಲಿ ರಚಿತವಾದ ಕೃತಿಗಳನ್ನು ವಿವರಿಸುವದರೊಂದಿಗೆ ಮುಕ್ತಾಯವಾಗುತ್ತದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವವರು ನವೋದಯದಿಂದ ಆರಂಭಿಸಿ ದಲಿತ - ಬಂಡಾಯ ಸಾಹಿತ್ಯಗಳನ್ನು ಪರಿಚಯಿಸುವದರೊಂದಿಗೆ ಕೊನೆಗೊಳ್ಳುತ್ತದೆ. ಅಂದರೆ ಬಹುಮಟ್ಟಿಗೆ ನಮ್ಮ ಸಾಹಿತ್ಯ ಚರಿತ್ರೆಗಳು ಕೃತಿಯೊಂದನ್ನು ಅಂತಿಮವೆಂದು ಪರಿಭಾವಿಸಿಕೊಂಡು ಬೆಳೆದಿವೆ.

ಈಗ ಈ ಬಗೆಯ ಬರೆಹದ ಕ್ರಮಗಳಿಂದ ನಮ್ಮನ್ನು ಬಿಡಿಸಿಕೊಂಡು, ಬೇರೆ ಬಗೆಯ ಸಾಹಿತ್ಯ ಚರಿತ್ರೆಗಳನ್ನು ಬರೆಯಲು ಸಾಧ್ಯವೇ ಎಂದು ಯೋಚಿಸಬೇಕಾಗಿದೆ. ಸರಳವಾದ ಒಂದು ಉದಾಹರಣೆಯೊಂದಿಗೆ ಇದನ್ನು ಸ್ವಲ್ಪ ವಿಸ್ತರಿಸಬಯಸುತ್ತೇನೆ.

ಕನ್ನಡದಲ್ಲಿ ಪ್ರಕಟವಾಗಿರುವ ರಾಮಾಯಣ ಕಾವ್ಯ ಪರಂಪರೆಯನ್ನು ಗಮನಿಸೋಣ. ಜೈನರು ಮೊದಲು ಕನ್ನಡದಲ್ಲಿ ರಾಮಾಯಣ ಬರೆದರು. ಪೊನ್ನನ ’ಭುವನೈಕ ರಾಮಾಭ್ಯುದಯ’ (ಕ್ರಿ. ಶ. ಸು ೯೫೦), ನಾಗಚಂದ್ರನ ’ರಾಮಚಂದ್ರ ಚರಿತ ಪುರಾಣ’ (ಕ್ರಿ. ಶ. ಸು ೧೧೦೦), ಕುಮುದೇಂದುವಿನ ’ಕುಮುದೇಂದು ರಾಮಾಯಣ’ (೧೨೭೦), ನಾಗರಾಜನ ’ಪುಣ್ಯಾಸ್ರವ’ (೧೨೭೦), ದೇವಪ್ಪನ ’ರಾಮವಿಜಯ’ (೧೩೩೧), ಚಂದ್ರಶೇಖರನ ’ರಾಮಚಂದ್ರ ಚರಿತ (೧೭೦೦), ದೇವಚಂದ್ರನ ’ರಾಮಕಥಾವತಾರ’ (೧೮೦೦) ಮೊದಲಾದುವು ಜೈನ ರಾಮಾಯಣಗಳು. ಇವರು ವಿಮಲಸೂರಿ ಮತ್ತು ಗುಣಭದ್ರರು ಆರಂಭಿಸಿದ ಜೈನ ರಾಮಾಯಣದ ಎರಡು ಪರಂಪರೆಗಳನ್ನು ಕನ್ನಡದಲ್ಲಿ ಪುನರ್‌ಸೃಷ್ಟಿಸಿದರು. ಇವೆಲ್ಲ ಓದುಗ ಕೇಂದ್ರಿತ ಕಾವ್ಯಗಳೆಂಬುದನ್ನು ಗಮನಿಸಬೇಕು. ವಿವಿಧ ಛಂದೋಪ್ರಕಾರಗಳಲ್ಲಿ ರಚಿತವಾದ ಈ ಕಾವ್ಯಗಳು ಕಾವ್ಯ-ಶಾಸ್ತ್ರ ಪರಿಣತರಿಗೆ ತುಂಬ ಸಂತೋಷವನ್ನು ನೀಡಬಲ್ಲುವು.

ಇಂಥ ಓದುಗ ಕೇಂದ್ರಿತ ಕಾವ್ಯಗಳಿಂದ ಭಿನ್ನವಾದ ರಾಮಾಯಣ ಕಾವ್ಯಗಳನ್ನು ಹದಿನಾಲ್ಕನೆ ಶತಮಾನದ ಆನಂತರ ಬ್ಯಾಹ್ಮಣ ಕವಿಗಳು ಬರೆಯಲು ಆರಂಭಿಸಿದರು. ಈ ಬ್ರಾಹ್ಮಣ ಕವಿಗಳು ತಮಗಿಂತ ಪೂರ್ವದಲ್ಲಿ ಬಂದ ಜೈನ ರಾಮಾಯಣಗಳತ್ತ ನೋಡದೆ ಸಂಸ್ಕೃತದಲ್ಲಿದ್ದ ವಾಲ್ಮೀಕಿ ರಾಮಾಯಣದತ್ತ ತಿರುಗಿಕೊಂಡರು. ಕುಮಾರ ವಾಲ್ಮೀಕಿಯ ’ತೊರವೆ ರಾಮಾಯಣ’ (ಕ್ರಿ. ಶ. ೧೫೦೦), ಚಾಮರಾಜನ ’ರಾಮಾಯಣ’ (ಕ್ರಿ. ಶ. ೧೬೩೦), ತಿಮ್ಮರಸನ ’ಮಾರ್ಕಾಂಡೇಯ ರಾಮಾಯಣ’ (೧೬೫೦), ಮಲ್ಲರಸನ ’ದಶಾವತಾರ ಚರಿತೆ’ (೧೬೮೦), ಶಂಕರನಾರಾಯಣನ ’ಆಧ್ಯಾತ್ಮ ರಾಮಾಯಣ’ (೧೭೦೦) ಮತ್ತಿತರ ಕೃತಿಗಳು ಮಧ್ಯಕಾಲೀನ ಕರ್ನಾಟಕದಲ್ಲಿ ರಚಿತವಾದುವು. ಈ ಕಾವ್ಯ ಕೃತಿಗಳು ಮುಖ್ಯವಾಗಿ ಷಟ್ಪದಿಯಲ್ಲಿ ರಚಿತವಾದುವು ಎಂಬುದನ್ನು ಮುಖ್ಯವಾಗಿ ಗಮನಿಸಿದರೆ, ಅವು ’ಕೇಳುಗ’ ಕೇಂದ್ರಿತವಾಗಿ ಬೆಳೆದುವು ಎಂಬುದು ಗೊತ್ತಾಗುತ್ತದೆ. ಅಂದರೆ ಈ ಕಾವ್ಯವನ್ನು ಒಬ್ಬ ರಾಗವಾಗಿ ಹಾಡಿದರೆ ನೂರಾರು ಜನ ಅದನ್ನು ಕೇಳಬಹುದು. ಅದಕ್ಕೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ. ಕಾರಣ ಈ ಕಾವ್ಯಗಳು ’ಗಮಕ’ ಎಂಬ ಹೊಸ ಶೈಲಿಯೊಡನೆಯೂ ’ಹರಿಕತೆ’ ಎಂಬ ಇನ್ನೊಂದು ನವೀನ ಪ್ರಕಾರದೊಡನೆಯೂ ಸೇರಿಕೊಂಡು ವಿಸ್ತಾರವಾಗತೊಡಗಿದುವು. ಈ ಗಮಕ ಮತ್ತು ಹರಿಕತೆಗಳಿಗೆ ದೇವಸ್ಥಾನ ಮತ್ತಿತರ ಕಡೆಗಳಲ್ಲಿ ಅಭಿವ್ಯಕ್ತಿಗೆ ಅವಕಾಶ ದೊರೆಯುತ್ತಿದ್ದಂತೆ ಅವು ಅಲ್ಲಿನ ವಾಸ್ತು ಮತ್ತು ಶಿಲ್ಪಗಳ ಮೇಲೂ ಪರಿಣಾಮ ಬೀರತೊಡಗಿದವು. ರಾಮಾಯಣ ಸಂಬಂಧಿ ಅನೇಕ ಘಟನೆಗಳು ಸಭಾಂಗಣದ ಸುತ್ತೆಲ್ಲ ಶಿಲ್ಪಗಳಾಗಿ ವರ್ಣ ಚಿತ್ರಗಳಾಗಿ ಮರುಸೃಷ್ಟಿಕೊಂಡವು. ಹೀಗೆ ಓದುಗ ಕೇಂದ್ರಿತ ಸಾಹಿತ್ಯ ಪಠ್ಯಗಳು ಮಧ್ಯಕಾಲೀನ ಕರ್ನಾಟಕದಲ್ಲಿ ಕೇಳುಗ ಕೇಂದ್ರಿತ ಪಠ್ಯಗಳಾಗಿ ಮಾರ್ಪಟ್ಟು ಜನ ಸಮುದಾಯವನ್ನು ತಲುಪಲು ಪ್ರಯತ್ನಿಸಿದ್ದು ತುಂಬ ಕುತೂಹಲಕರ ವಿಷಯವಾಗಿದೆ.

ನಿಧಾನವಾಗಿ ಈ ’ಕೇಳುಗ’ ಕೇಂದ್ರಿತ ಪಠ್ಯಗಳು ೧೬-೧೭ ನೇ ಶತಮಾನದಲ್ಲಿ ’ನೋಡುಗ’ ಕೇಂದ್ರಿತ ಪಠ್ಯಗಳಾಗಿ ಬೆಳೆದದ್ದು ಕೂಡಾ ಇಲ್ಲಿ ಉಲ್ಲೇಖಾರ್ಹ. ಕುಂಬಳೆಯ ಪಾರ್ತಿಸುಬ್ಬ (೧೬೨೦), ಗೆರೆಸೊಪ್ಪೆ ಶಾಂತಪ್ಪಯ್ಯ, ಅಳಿಯ ಲಿಂಗರಾಜ, ಕಡಂದಲೆ ರಾಮರಾವ್ ಮೊದಲಾದ ಯಕ್ಷಗಾನ ಕವಿಗಳು ತೊರವೆ ರಾಮಾಯಣ, ದಶಾವತಾರ ಚರಿತ್ರೆ, ಹನುಮದ್ ರಾಮಾಯಣ, ಮತ್ತಿತರ ಕೇಳುಗ ಕೇಂದ್ರಿತ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ’ನೋಡುಗ’ ಕೇಂದ್ರಿತ ಪಠ್ಯಗಳು ಸೃಷ್ಟಿಯಾದುವು. ಯಕ್ಷಗಾನ ರಂಗಭೂಮಿಯ ಸೂಕ್ಷ್ಮಗಳನ್ನು ಬಹಳ ಚೆನ್ನಾಗಿ ತಿಳಿದಿದ್ದ ಪಾರ್ತಿಸುಬ್ಬ (೧೬೨೦) ನಂತೂ ತೊರವೆ ರಾಮಾಯಣವನ್ನು ಮುಖ್ಯವಾಗಿ ಆಧರಿಸಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಎಂಟು ಪ್ರಸಂಗಗಳನ್ನು ಬರೆದುಬಿಟ್ಟ. ಆತನ ಪಠ್ಯಗಳು ಸಂಗೀತ, ಕುಣಿತ, ವೇಷಭೂಷಣ ಮತ್ತು ಮಾತುಗಾರಿಕೆಗಳೆಂಬ ನಾಲ್ಕು ಅಂಗಗಳ ಮೂಲಕ ಯಕ್ಷಗಾನವಾಗಿ ರಂಗಭೂಮಿಯಲ್ಲಿ ಪ್ರತ್ಯಕ್ಷವಾದಾಗ ಅವನ್ನು ಲಕ್ಷಾಂತರ ಜನ ನೊಡುವಂತಾಯಿತು. ಈ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನು ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು.

ರಾಮಾಯಣದ ಹಾಗೆ ಭಾರತ ಪರಂಪರೆಯೂ ಕನ್ನಡದಲ್ಲಿ ವಿಸ್ತಾರಗೊಂಡಿದೆ. ಪಂಪನ ವಿಕ್ರಮಾರ್ಜುನ ವಿಜಯವು ಓದುಗ ಕೇಂದ್ರಿತ ಕಾವ್ಯ. ಕುಮಾರವ್ಯಾಸನದ್ದು ಕೇಳುಗ ಕೇಂದ್ರಿತ ಕಾವ್ಯ. ಕುಮಾರವ್ಯಾಸ ಭಾರತದ ಉದ್ಯೋಗಪರ್ವವನ್ನಾಧರಿಸಿದ, ’ಕೃಷ್ಣ ಸಂಧಾನ’ ಲಕ್ಷಾಂತರ ಪ್ರಯೋಗಗಳನ್ನು ಕಂಡ ನೋಡುಗ ಕೇಂದ್ರಿತ ಪಠ್ಯ.

ಹೀಗೆ ಪಠ್ಯಗಳು ಬಹುರೂಪಿಗಳಾಗಿ ವಿಸ್ತಾರಗೊಂಡಿವೆ, ಹಾಗೆ ವಿಸ್ತಾರಗೊಂಡು ಬದುಕುಳಿದಿವೆ. ಈ ನಿಟ್ಟಿನಲ್ಲಿ ಬರೆಯಬೇಕಾದ ಸಾಹಿತ್ಯ ಚರಿತ್ರೆ ಇಂದಿನ ಅಗತ್ಯಗಳಲ್ಲೊಂದಾಗಿದೆ.
Published in Vijayakarnataka paper on October 02, 2011

Wednesday, October 12, 2011

ಆಡಂ ಮತ್ತು ಈವ್‌ಗಳನ್ನು ಬಿಟ್ಟು ಜಿಗಣೆಗಳ ಕಡೆಗೆ


ಕರ್ನಾಟಕ ಎತ್ತ ನೋಡಿದೆ ಮತ್ತು ಅದೀಗ ನೋಡುತ್ತಿದೆ? ನನಗೆ ಅನ್ನಿಸಿದ ಹಾಗೆ ಅದಲು ಮೊದಲು ನೋಡುತ್ತಿದ್ದುದು ಉತ್ತರದ ವಿಂಧ್ಯ ಪರ್ವತದ ಆಚೆಗೆ ಮತ್ತು ೧೯ನೇ ಶತಮಾನದ ಆನಂತರ ಪಶ್ಚಿಮದ ಕಡಲಾಚೆಯ ಕಡೆಗೆ. ಕನ್ನಡಕ್ಕೆ ಪರ್ವತಗಳನ್ನು ಸುಲಭವಾಗಿ ದಾಟುವ ಮತ್ತು ಕಡಲನ್ನು ಆರಾಮವಾಗಿ ಹಾರು ವಿಶೇಷ ಶಕ್ತಿ ಇರುವುದು ಕೂಡಾ ತುಂಬಾ ಕುತೂಹಲಕಾರಿ ವಿಷಯ. ಮೂಲ ದ್ರಾವಿಡದಿಂದ ನಿಧಾನವಾಗಿ ಬೇರೆಯಾಗಿ, ಆನಂತರದ ಕಾಲದಲ್ಲಿ ಸ್ವತಂತ್ರವಾಗಿ ಬೆಳೆದ ಕನ್ನಡ ಭಾಷೆಯು ಅದರ ಆರಂಭಿಕ ಕಾಲದಲ್ಲಿ ನೋಡಿದ್ದು ಉತ್ತರದ ಕಡೆಗೆ. ಹಾಗೆ ನೋಡಿದ್ದರಿಂದಲೇ ಅದಕ್ಕೆ ಉತ್ತರದಿಂದ ಆಗಮಿಸಿದ ಬೌದ್ಧ-ಜೈನ ಧರ್ಮಗಳು ಆಪ್ತವಾದವು. ಸಂಸ್ಕೃತವನ್ನೂ ಅದು ಆದರದಿಂದ ಸ್ವಾಗತಿಸಿತು. ೧೭೯೯ ರಲ್ಲಿ ಟಿಪ್ಪೂವಿನ ಮರಣಾನಂತರ ವಸಾಹತೀಕರಣಕ್ಕೆ ಒಳಪಟ್ಟ ಕರ್ನಾಟಕವು ನಿಧಾನವಾಗಿ ಉತ್ತರದ ಕಡೆ ನೋಡುವುದನ್ನು ಬಿಟ್ಟು ಪಶ್ಚಿಮದ ಕಡೆ ನೋಡಲು ಆರಂಭಿಸಿತು. ವಸಾಹತೀಕರಣಕ್ಕೆ ಮೊದಲು ಒಳಪಟ್ಟ ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಕನ್ನಡದ ಮೊದಲ ಕಾದಂಬರಿಗಳು ಸಹಜವಾಗಿ ಕಾಣಿಸಿಕೊಂಡವು. ಬಿ.ಎಂ. ಶ್ರೀಕಂಠಯ್ಯನವರು ಅನುವಾದಿಸಿಕೊಟ್ಟ ಇಂಗ್ಲೀಷ್ ಗೀತೆಗಳು ಕನ್ನಡ ನವೋದಯ ಕಾವ್ಯಕ್ಕೆ ನಾಂದಿ ಹಾಡಿತು. ಬಿ. ಎಂ.ಶ್ರೀ ಅವರು ’ಅವಳ ತೊಡವೆ ಇವಳಿಗಿಟ್ಟು" ಎಂದಾಗ ಅವರ ಮುಂದೆ ಇದ್ದ ಚೆಲುವೆ ಪಶ್ಚಿಮದವಳು. ಮುಂದೆ ಪಶ್ಚಿಮದ ಪ್ರಭಾವವನ್ನು ಅರಗಿಸಿಕೊಂಡು ಹೊಸಗನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯಿತು. ಕನ್ನಡ ನವ್ಯ ಕಾವ್ಯ ಮತ್ತೆ ಪಶ್ಚಿಮದ ಅಸ್ತಿತ್ವವಾದವೇ ಮೊದಲಾದ ಬಗೆ ಬಗೆಯ ಚಿಂತನಾ ಕ್ರಮಗಳಿಂದ ಪ್ರೇರಣೆ ಪಡೆಯಿತು. ನವ್ಯದ ಆನಂತರ ಬಂದ ಬಂಡಾಯ-ದಲಿತ ಸಾಹಿತ್ಯವು ಅಂಬೇಡ್ಕರ್-ಮಾರ್ಕ್ಸ್-ಲೋಹಿಯಾ ವಾದಗಳಿಗಿಂದ ಪ್ರಭಾವಿತಗೊಂಡಿತು.
ಹೀಗೆ ಕನ್ನಡವು ಉತ್ತರ ಮತ್ತು ಪಶ್ಚಿಮದಿಂದ ಪ್ರೇರಣೆ ಪಡೆದು ಬೆಳೆದಿದೆ. ಹಾಗೆ ಬೆಳೆದಾಗ ಅದು ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದಿರುವುದು ಅದರ ಹೆಚ್ಚುಗಾರಿಕೆ. ಆದರೆ ಉತ್ತರ ಮತ್ತು ಪಶ್ಚಿಮದ ಕಡೆ ನೋಡಿದ ಅದು ಯಾಕೆ ದಕ್ಷಿಣ ಮತ್ತು ಪೂರ್ವದ ಕಡೆಗೆ ಯಾಕೆ ಮುಖ ಮಾಡಿಲ್ಲ? ಅಥವಾ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಹಾಗೆ ಮಾಡಬಾರದೇಕೆ? ಹೀಗೆ ಮಾಡದ್ದರಿಂದ ಅದಕ್ಕಾದ ನಷ್ಟ ಎಷ್ಟು? ಕನ್ನಡವು ದಕ್ಷಿಣ ಮತ್ತು ಪೂರ್ವದಿಂದ ಪ್ರೇರಣೆ ಪಡೆಯಲು ಸಾಧ್ಯವುಂಟೇ? ಇಂಥ ಪ್ರೇರಣೆಗಳು ಕನ್ನಡವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಲಾರವೇ?
ಶಿಷ್ಯವೇತನವೊಂದರ ಸಹಾಯದಿಂದ ನಾನು ಪೂರ್ವದ ಕಡೆ ಒಂದೆರೆಡು ವರ್ಷಗಳ ಹಿಂದೆ ಪಯಣ ಬೆಳೆಸಿದ್ದೆ. ಟೋಕಿಯೋದಲ್ಲಿ ಇಳಿದು ಅಲ್ಲಿಂದ ಉತ್ತರಕ್ಕೆ ಸುಮಾರು ೩೦೦ ಕಿ.ಮಿ. ದೂರ ಪ್ರಯಾಣ ಬೆಳೆಸಿ ಹಾಯಚಿನೆ ಎಂಬ ಪರ್ವತದ ತಪ್ಪಲಲ್ಲಿ ಮೂರು ತಿಂಗಳ ಕಾಲ ಬದುಕಲು ನಿರ್ಧರಿಸಿದ್ದೆ. ನಮಗೆಲ್ಲ ಹಿಮಾಲಯ ಪರ್ವತವಿದ್ದ ಹಾಗೆ ಜಪಾನೀಯರಿಗೆ ಹಾಯಚಿನೆ ಪರ್ವತ. ಆ ಪರ್ವತದ ತುತ್ತ ತುದಿಯಲ್ಲಿ ನೀರಿನ ಹೊಂಡವೊಂದಿದ್ದು, ಅದು ಅತ್ಯಂತ ಪವಿತ್ರ ಮಾತ್ರವಲ್ಲ, ಅಲ್ಲಿ ಆಗಲೇ ಸತ್ತ ಹಿರಿಯರ ಆತ್ಮಗಳು ’ಕಮಿ’ಯ ರೂಪದಲ್ಲಿ ವಾಸಿಸುತ್ತವೆ. ಕಮಿಗಳು ಸತ್ತವರ ಆತ್ಮಗಳೂ ಹೌದು, ದೈವಗಳೂ ಹೌದು, ಜೊತೆಗೆ ಊರಿಗೆ ಮಳೆ, ಬೆಳೆ ತಂದುಕೊಟ್ಟು ಜನರ ರೋಗಗಳನ್ನು ದೂರ ಮಾಡುವ ರಕ್ಷಕರೂ ಹೌದು. ಕರಾವಳಿ ಕರ್ನಾಟಕದ ಭೂತಾರಾಧನೆಯನ್ನು ಕಮಿಗಳ ಆರಾಧನೆಯ ಜೊತೆಗೆ ಸುಲಭವಾಗಿ ಹೋಲಿಸಬಹುದು. ಈ ಹಾಯಚಿನೆ ಪರ್ವತದ ಬುಡದಲ್ಲಿರುವ ತಾಕೆ ಎಂಬ ಹಳ್ಳಿಯಲ್ಲಿ ನನಗೆ ಜಪಾನೀಯರ ಉತ್ಪತ್ತಿಯನ್ನು ಹೇಳುವ ’ಕೊಜಿಕಿ’ ಎಂಬ ಮಹಾಕಾವ್ಯದ ಕೆಲವು ಭಾಗಗಳನ್ನು ಕೇಳುವ ಮತ್ತು ಅದರ ಕೆಲವು ಭಾಗಗಳನ್ನು ಅಭಿನಯಿಸಿ ತೋರಿಸುವ ’ಕಾಗುರಾ’ ಎಂಬ ನೃತ್ಯ ಪ್ರಕಾರವನ್ನು ನೋಡುವ ಸದವಕಾಶ ಒದಗಿಬಂದಿತ್ತು. ಆ ಕೊಜಿಕಿ ಕಾವ್ಯದ ಕತಾ ನಾಯಕರು ಇಜನಾಮಿ ಮತ್ತು ಇಜನಾಗಿ ಎಂಬ ದಂಪತಿಗಳು. ಈ ದಂಪತಿಗಳಿಂದ ದಿನ ಬೆಳಗಾಗುವುದರೊಳಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮನುಷ್ಯರು ಹುಟ್ಟಿದರು ಎಂದು ಕೊಜಕಿ ಹೇಳುತ್ತದೆ. ಕಾವ್ಯ ಬೆಳೆಯು ತ್ತಿದ್ದಂತೆ, ಅದರ ವಿವರಣೆಗಳು ದಟ್ಟವಾಗುತ್ತಿರುವಂತೆ ಇಜನಾಮಿ ಮತ್ತು ಇಜನಾಗಿಯರು ಜಿಗಣೆ ದಂಪತಿಗಳೆಂಬುದು ಖಚಿತವಾಗ ತೊಡಗಿತು. ನನ್ನ ಜೊತೆಗೆ ಅನುವಾದಕಿಯಾಗಿ ಸಹಕರಿಸುತ್ತಿದ್ದ ಮಿನಕವ ಅದನ್ನು ಧೃಢ ಪಡಿಸಿದಳು. ಎಲುಬಿಲ್ಲ, ರಕ್ತವಿಲ್ಲ, ಬಾಯಿಯಿಲ್ಲ, ಕಣ್ಣಿಲ್ಲ, ಕಾಲಿಲ್ಲ, ಕೈಯಿಲ್ಲ, ಆದರೆ ಜೀವವಿದೆ. ಕ್ಷಣಮಾತ್ರದಲ್ಲಿ ಇದ್ದಕ್ಕಿದ್ದಂತೆ ಸಹಸ್ರ ಸಂಖ್ಯೆಯಲ್ಲಿ ಸೃಷ್ಟಿಯಾಗಿಬಿಡುವ ಈ ಜಿಗಣೆಗಳನ್ನು ನಾನು ಹುಟ್ಟಿ ಬೆಳೆದ ಬಂಟಮಲೆ, ಎಳವೆಯಲ್ಲಿ ಓಡಾಡಿದ ಕರಿಮಲೆ, ಮೀನು ಹಿಡಿಯತ್ತಿದ್ದ ಗೋಣಗುಂಡಿ (ಪಶ್ಚಿಮ ಘಟ್ಟದ ಭಾಗಗಳು) ಗಲ್ಲಿ ಹೇರಳವಾಗಿ ಕಂಡಿದ್ದೇನೆ. ಅವು ವಾಸನೆ ಹಿಡಿದು ಹಿಂಬಾಲಿಸುತ್ತವೆ, ಗೊತ್ತಾಗದ ಹಾಗೆ ಮೈಮೇಲೇರುತ್ತವೆ. ಹಾಗೆ ನೋಡಿದರೆ ನಾನು ಬೆಳೆದದ್ದೇ ಜಿಗಣೆಗಳ ಜೊತೆಗೆ. ಬೇಸಗೆಯಲ್ಲಿ ಅವು ಕಾಣಿಸುವುದೇ ಇಲ್ಲ. ಆದರೆ ಒಂದು ಮಳೆ ಬಿದ್ದರೆ ಸಾಕು, ಮರುದಿನ ಸಹಸ್ರ ಸಂಖ್ಯೆಯಲ್ಲಿ ತರಗೆಲೆಗಳ ಅಡಿಯಿಂದ ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುತ್ತವೆ. ಆಕಾರ ಇದ್ದರೂ, ಇಲ್ಲದಂತಿರುವ, ಜೀವವವಿದ್ದರೂ, ಜೀವಿಗಳ ಯಾವ ಗುಣ ಲಕ್ಷಣವೂ ಇಲ್ಲದಿರುವ ಈ ಜಿಗಣೆಗಳೇ ನಮ್ಮ ಪೂರ್ವಜರು ಎಂಬ ಜಪಾನೀಯರ ನಂಬಿಕೆ ನನಗೆ ’ ನಾವೆಲ್ಲ ಆಡಂ ಮತ್ತು ಈವ್’ ಎಂಬ ದೇವ ದಂಪತಿಗಳಿಂದ ಹುಟ್ಟಿದೆವು’ ಎಂಬ ಪಾಶ್ಚಿಮಾತ್ಯ ಚಿಂತನಾಕ್ರಮದಿಂದ ತುಂಬ ಬೇರೆಯಾಗಿ ಕಂಡದ್ದಲ್ಲದೆ ಹೆಚ್ಚು ಆಪ್ತವಾಗಿಯೂ ಕಂಡಿತು. ಸ್ವರ್ಗದಿಂದ ದೂರವಾಗಿ, ಜಿಗಣೆಗಳಿಗೆ ಹತ್ತಿರವಾಗಿ ಬೆಳೆದ ನನಗೆ ಕೊಜಿಕಿ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಅನಿಸಿತು.
ನಮ್ಮ ಜನಪದ ಕಾವ್ಯಗಳ ಕೆಲವು ಭಾಗಗಳು ವಾರ್ಷಿಕ ಜಾತ್ರೆಗಳಲ್ಲಿ ಪುನರಭಿನಯಗೊಂಡು ನವ ನವೀನವಾಗಿ ಬದುಕುಳಿಯುತ್ತವೆ. ಕೊಜಿಕಿ ಕಾವ್ಯದ ಕೆಲವು ಭಾಗಗಳು ಕೂಡಾ ಹಾಯಚಿನೆ ಪರ್ವತದ ಬುಡದಲ್ಲಿ ಕಾಗುರಾ ಎಂಬ ಹೆಸರಿನ ರಂಗರೂಪವಾಗಿ ಕಾಣಿಸಿಕೊಳ್ಳುತ್ತದೆ. ಯಕ್ಷಗಾನದಲ್ಲಿ ಹೇಗೆ ತೆಂಕು -ಬಡಗು ಎಂಬ ಪ್ರಾದೇಶಿಕ ರೂಪಗಳು ಕಾಲಾಂತರದಲ್ಲಿ ಕಾಣಿಸಿಕೊಂಡವೋ ಅದೇ ರೀತಿ ಕಾಗುರಾದಲ್ಲಿಯೂ ಹಾಯಚಿನೆ ಕಾಗುರಾ, ತಾಕೆ ಕಾಗುರಾ, ಒತ್ಸುಗುನಾಯ್ ಕಾಗುರಾ , ಚಿಚಿಬು ಕಾಗುರಾ ಮತ್ತಿತರ ಪ್ರಾದೇಶಿಕ ರೂಪಗಳಿವೆ. ನಾನು ಹಾಯಚಿನೆ ಪರ್ವತದ ಬುಡದ ಹಳ್ಳಿಯಲ್ಲಿ ಇಡೀ ರಾತ್ರಿ ’ಹಾಯಚಿನೆ ಕಾಗುರಾ’ ಪ್ರದರ್ಶನವನ್ನು ನೋಡಿದ್ದೆ. ನಾನು ನೋಡಿದ ಆ ರಾತ್ರಿಯ ಪ್ರಸಂಗವನ್ನು ’ಕೊಜಿಕಿ ಮಹಾಕಾವ್ಯದಿಂದ ಆಯ್ದುಕೊಳ್ಳಲಾಗಿತ್ತು. ಆ ಪ್ರಸಂಗದ ಪ್ರಕಾರ ಜಗತ್ತಿಗೆ ಬೆಳಕು ನೀಡುವ ’ಅಮತೆರಸು’ ಎಂಬ ಸೂರ್ಯದೇವತೆಗೆ (ಜಪಾನೀಯರ ಪ್ರಕಾರ ಸೂರ್ಯ ದೇವತೆ ಹೆಣ್ಣು) ಒಮ್ಮೆ ಬದುಕು ಬೇಸರವಾಗುತ್ತದೆ. ಆಕೆ ಗುಹೆಯೊಳಕ್ಕೆ ನುಗ್ಗಿ ಮಲಗಿ ಬಿಡುತ್ತಾಳೆ. ಲೋಕವೆಲ್ಲ ಕತ್ತಲಾಗುತ್ತದೆ. ಆಗ ಆಕೆಯ ಬೇಸರವನ್ನು ಕಳೆಯಲು ಬಗೆ ಬಗೆಯ ಜಿಗಣೆಗಳ ಜೊತೆಗೆ ಪ್ರಕೃತಿಯ ವಿಭಿನ್ನ ಶಕ್ತಿಗಳು ಬೇರೆ ಬೇರೆ ವೇಷ ಧರಿಸಿ ಚಿತ್ರ ವಿಚಿತ್ರವಾಗಿ ನರ್ತಿಸುತ್ತವೆ. ಈ ನರ್ತನಗಳು ಕೊನೆಗೂ ಅಮತೆರಸುವಿನ ಬೇಸರ ಕಳೆಯುತ್ತಿವೆ. ಆಕೆಯು ಮುಖದಲ್ಲಿ ಮಂದಹಾಸ ಮೂಡುತ್ತದೆ. ಆಕೆ ಗುಹೆಯಿಂದ ಹೊರಬರುತ್ತಾಳೆ. ಲೋಕಕ್ಕೆ ಬೆಳಕು ಮೂಡುತ್ತದೆ. ರಂಗಸ್ಥಳದ ಎಲ್ಲ ಪಾತ್ರಗಳೊಡನೆ ತಾನೂ ನರ್ತಿಸುತ್ತಾಳೆ.
ಸೂರ್ಯನನ್ನು ಗಂಡಾಗಿ ಕಲ್ಪಿಸಿಕೊಂಡ ನಮ್ಮ ಚಿಂತನೆಗಳಿಗೆ ವಿರುದ್ಧವಾಗಿ ಜಪಾನೀಯರು ಸೂರ್ಯನನ್ನು ಹೆಣ್ಣಾಗಿ ಕಲ್ಪಿಸಿಕೊಂಡದ್ದು ನನಗೂನು ಇಷ್ಟವಾಯಿತು. ಎಳವೆಯಲ್ಲಿ ಕರೆದೆಬ್ಬಿಸಿ ಬೆಳಕು ಕಾಣಿಸುತ್ತಲಿದ್ದ ತಾಯಿ, ಈಗ ನಾನೇಳುವ ಮೊದಲೇ ಎದ್ದು ಬೆಳಗಿನ ಸುದ್ಧಿ ಸಾರುವ ಪತ್ನಿ ಇವರೆಲ್ಲ ಹೆಂಗುಸರೇ ತಾನೇ? ಪಶ್ಚಿಮದ ಪುರುಷ ಕೇಂದ್ರಿತ ಯೋಚನಾಕ್ರಮಗಳನ್ನು ಭಂಗಗೊಳಿಸಿಕೊಳ್ಳಲು ಪೂರ್ವದ ಕಡೆ ಹೊರಳಿಕೊಳ್ಳುವುದರಿಂದ ಕನ್ನಡಕ್ಕೆ ಲಾಭವಿದೆ.
Published in Vijayakarnataka paper on September 18, 2011