Thursday, May 30, 2019

‘ಕಾಶಿ’ ಅಂದರೆ ‘ಬೆಳಕಿನ ಊರು’



ಕಾಶಿ ಪದಕ್ಕೆಬೆಳಕಿನ ಊರುಎಂಬ  ಅರ್ಥವಿದೆ. ಆದರೆ ಅಲ್ಲಿ ಹೋದರೆ, ಬೆಳಕು ಎಂದೋ ಆರಿಹೋದ ಅನುಭವವಾಗುತ್ತದೆ. ಎದೆ ತುಂಬಾ ಕತ್ತಲು ಕವಿಯುತ್ತದೆ. ನಮ್ಮ ಶಾಸನ ಕವಿಗಳು  ವಾರಣಾಸಿಯೊಳ್ ಸಾಸಿರ ಕವಿಲೆಯ ಕೊಂದ ಪಾಪಂ’ ಎಂದು ಬರೆದದ್ದನ್ನು ಓದಿದಾಗ,  ಹರಿಹರ, ರಾಘವಾಂಕರ ಕಾವ್ಯಗಳಲ್ಲಿ ವಿಶ್ವನಾಥನ ಹೆಸರು ಓದಿದಾಗ, ದೂರದ ಕಾಶಿಯ ಬಗೆಗೆ ರೋಮಾಂಚವಾಗುತ್ತಿತ್ತು. ಆದರೆ ಅಲ್ಲಿಗೆ ಒಮ್ಮೆ ಹೋಗಿ ಬಂದರೆ ಮನ ಬಾಡುತ್ತದೆ. ಹಿಂದುಗಳ ಶ್ರದ್ಧೆಯ ಕೇಂದ್ರವು ಹಣ ದೋಚುವವರ ಪಾಲಿನ ಸ್ವರ್ಗವಾದದ್ದಾದರೂ ಹೇಗೆ? ಜೀವನವೆಲ್ಲಾ ನಶ್ವರವೆಂದು ಪ್ರವಚನ ಮಾಡುವ ಪುರೋಹಿತರುಗಳು  ತಮ್ಮ ನಶ್ವರ ಜೀವನಕ್ಕಾಗಿ ದೇಶದಾದ್ಯಂತದಿಂದ ಆಗಮಿಸುವ ಮುಗ್ಧ ಭಕ್ರರನ್ನೇಕೆ ಹಾಗೆ ಸುಲಿಯುತ್ತಾರೆ? ಹಿಂದೂ ಧರ್ಮದ ವಾರೀಸುದಾರರು ಕಾಶಿಯನ್ನು ಹೀಗೇಕೆ ಇರಿಸಿಕೊಂಡಿದ್ದಾರೆ? ಪ್ರಶ್ನೆಗಳಿಗೆ ನನಗಂತೂ ಉತ್ತರ ದೊರೆತಿಲ್ಲ. ಈಗ ಉತ್ತರ ಹುಡುಕುವುದೂ ಅಪರಾಧವಾಗಿದೆ.
ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ ಭಾರತದಲ್ಲಿ ಒಟ್ಟು ಏಳು ಪವಿತ್ರ ಕ್ಷೇತ್ರಗಳಿದ್ದು, ಅವಕ್ಕೆ ಮಾನವರನ್ನು ಹುಟ್ಟು ಸಾವುಗಳ ಆವರ್ತನದಿಂದ ಬಿಡುಗಡೆ ಮಾಡುವ ಶಕ್ತಿ ಇವೆ. ಅವುಗಳೆಂದರೆ -ಕಾಶಿ, ಕಾಂಚಿ, ಹರಿದ್ವಾರ, ಅಯೋಧ್ಯ, ಉಜ್ಜೈನಿ, ಮಥುರಾ ಮತ್ತು ದ್ವಾರಕ. ಏಳು ಕ್ಷೇತ್ರಗಳಲ್ಲಿ ಪರಮ ಪವಿತ್ರವಾಗಿರುವುದು ವಾರಣಾಸಿ. ಈ ಊರು ಈಗಲೂ ಹರಿಯುತ್ತಿರುವವರುಣಾ’ ಮತ್ತು ಎಂದೋ ಕಾಣೆಯಾದಅಸ್ಸಿ’ ಎಂಬೆರಡು ನದಿಗಳ ನಡುವೆ ಇರುವುದರಿಂದ,  ವಾರಣಾಸಿ ಹೆಸರು ಪಡೆದುಕೊಂಡಿದೆ. ವಾರಣಾಸಿಯ ಪಶ್ಚಿಮ ದಿಕ್ಕಿನಲ್ಲಿ ಗಂಗಾ ನದಿ ಹರಿಯುತ್ತದೆ. ವರುಣಾ ಮತ್ತು ಅಸ್ಸಿ ನದಿಗಳು ಗಂಗೆಯನ್ನು ಸೇರುವ ನಡುವಣ ಜಾಗದಲ್ಲಿ ಸುಮಾರು 79 ಘಾಟ್ಗಳಿವೆ. ಇವುಗಳೇ ಕಾಶಿಯ ಪವಿತ್ರ ಬಿಂದುಗಳು.  ಇವು ಸಾವಿರಾರು ವರ್ಷಗಳಿಂದ ಕೋಟ್ಯಂತರ ಜನರನ್ನು ಹಲವು ಕಾರಣಗಳಿಗಾಗಿ ಆಕರ್ಷಿಸುತ್ತಾ ಬಂದಿವೆ. ಹಲವು ವಿದ್ವಾಂಸರು ಹೇಳಿದ ಹಾಗೆ, ಅತ್ಯಂತ ಪುರಾತನವಾಗಿದ್ದರೂ, ಇಂದಿನ ವರೆಗೆ ಬದುಕುಳಿದ ಜಗತ್ತಿನ ಕೆಲವೇ ನಗರಗಳಲ್ಲಿ ವಾರಣಾಸಿಯೂ ಒಂದು. ಇಂಥ ನಗರ ಜಗತ್ತಿನಲ್ಲಿ ಬಹಳ ಇಲ್ಲವಾದ್ದರಿಂದ ಇದನ್ನು ನೋಡಲು ಭಕ್ತರು ಮಾತ್ರವಲ್ಲ ಸಂಶೋಧಕರು, ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು,  ಮತ್ತಿತರರ ದಂಡೇ ಬರುತ್ತಿದೆ.
‘ಬೆಳಕಿನ ಊರು’ ಎಂದು ಹೆಸರುಗಳಿಸಿಕೊಂಡ ಕಾಶಿಯಲ್ಲಿ ಸಂಭವಿಸುವ ಸಾವುಗಳ ಬಗೆಗೆ ಬಹಳ ಅಧ್ಯಯನಗಳು ನಡೆದು, ಕುತೂಹಲಕರ ವಿಷಯಗಳು ಹೊರಬಂದಿವೆ. ಕಾಶಿಯಲ್ಲಿ ಸತ್ತರೆ ನೇರ ಸ್ವರ್ಗ ಸೇರಬಹುದು ಎಂಬ ನಂಬಿಕೆಯಲ್ಲಿ ಸಾಯಲೆಂದೇ ಕಾಶಿಗೆ ಬರುವವರು ಅನೇಕರು. ಅಲ್ಲಿ ಬಂದಾದ ಆನಂತರ ಕಾರಣಾಂತರಗಳಿಂದ ಸಾಯದೇ ಉಳಿದು, ಯಾವುದೋ ಆಶ್ರಮದಲ್ಲಿ ಬರಲಿರುವ ಸಾವಿಗಾಗಿ ಕಾಯುತ್ತಾ ನಿಟ್ಟುಸಿರು ಬಿಡುವವರು ಮತ್ತು ಅವರನ್ನು ನೋಡಲು ಬರುವ ಬಂಧುಗಳದು ಅಲ್ಲಿ ದೊಡ್ಡ ಸಂಖ್ಯೆ. ಬೇರೆಲ್ಲೋ ಸತ್ತವರ ಬೂದಿಯನ್ನು ಗಂಗೆಯಲ್ಲಿ ತೇಲಿಬಿಡಲೆಂದು ಬರುವವರು ಎಲ್ಲ ಘಾಟ್ಗಳಲ್ಲಿ ಕಾಣಸಿಗುತ್ತಾರೆ. ತಮ್ಮ ಪಾಪಗಳನ್ನು ಗಂಗೆಯಲ್ಲಿ ತೊಳೆಯಬಯಸಿ,  ಪಾಪಗಳನ್ನು ಹೊತ್ತುಕೊಂಡು ಬರುವವರ ಲೆಕ್ಕ ಇಟ್ಟವರಿಲ್ಲ. ಅರೆಬೆಂದ ಹೆಣಗಳು, ಕಟ್ಟಿಗೆಯ ಅಭಾವದಿಂದ ಹೆಣವನ್ನು ಪೂರ್ತಿ ಸುಡಲಾಗದೆ ಹಪಹಪಿಸುವವರು, ಸಾವಿಗೆ ರೋಧಿಸುವವರು -ಹೀಗೆ ಕಾಶಿಯ ಲೋಕವೆಂದರೆ ಸತ್ತವರ ಮತ್ತು ಸಾಯದಿರುವವರ ಲೋಕಗಳು ಒಂದಕ್ಕೊಂದು ಬೆಸೆದುಕೊಳ್ಳುವ ಸ್ಥಳ. ಹೆಣಸುಡುವಾಗಣ ಹೊಗೆಯ ಕೆಟ್ಟ ವಾಸನೆ, ಸತ್ತವರನ್ನು ಮತ್ತೆ ಪುನರ್ಜನ್ಮಕ್ಕೆ ಒಳಪಡಿಸುವ ಪುರೋಹಿತರ ಮಂತ್ರಗಳು, ಹಣಕ್ಕಾಗಿ ಹಪಹಪಿಸುವ ಜನರು-  ಇವೆಲ್ಲವುಗಳಿಗೆ ಸಾಕ್ಷಿಯಾಗಿರುವ ಭಗವಾನ್ ವಿಶ್ವನಾಥ,  ಕಾಶಿಯನ್ನು ಅನನ್ಯವಾದ ನಗರವೆಂದು ಪರಿಗಣಿಸುವಂತೆ ಮಾಡಿದೆ.
ಹೆಣಗಳ ಲೋಕದಿಂದ ಹೊರಬಂದರೆ, ಬೇರೆಯದೇ ಆದ ವಾರಣಾಸಿಯೊಂದು ಕಾಣುತ್ತದೆ.  ಅದರಲ್ಲಿ ಜಗ ಮೆಚ್ಚಿದ ಬನಾರಾಸ್ ಪಾನ್ ಕೂಡಾ ಒಂದು. ಅದನ್ನು ತಿನ್ನುವುದು ಹೇಗೆ ಖುಶಿಯ ವಿಷಯವೋ, ಅದನ್ನು ತಯಾರು ಮಾಡುವ ಪಾನ್ವಾಲಾನನ್ನು ನೋಡುವುದೂ, ಆತ ಹೇಳುವ ಕಾಶಿಯ ಕತೆಯನ್ನು ಕೇಳುವುದೂ ಸಂತೋಷದ ಸಂಗತಿ. ಬನಾರಾಸ್ ಘರಾನಾ ಜಗತ್ ಪ್ರಸಿದ್ಧವಾದುದು.  ತುಳಸೀದಾಸನ ರಾಮಚಂದ್ರ ಚರಿತಮಾನಸವು ವಾರಣಾಸಿಯಲ್ಲಿ ಮತ್ತು ಅದರ ಪಕ್ಕದ ರಾಮನಗರದ ಪ್ರಖ್ಯಾತ ರಾಮಲೀಲಾದಲ್ಲಿ ಮರು ಹುಟ್ಟು ಪಡೆದು ಬೆಳಕಿಲ್ಲದ ಊರಿಗೆ ಬೆಳಕು ತಂದು ಕೊಡುತ್ತದೆ.
ಭಾರತದ ಎಲ್ಲ ಚರಿತ್ರೆಗಳೂ ಸುರುವಾಗುವಂತೆ, ವಾರಣಾಸಿಯ ಚರಿತ್ರೆಯೂ ಋಗ್ವೇದದಿಂದಲೇ ಆರಂಭವಾಗುತ್ತದೆ. ಅಲ್ಲಿ ನಗರವನ್ನು ಕಾಶಿ ಎಂದು ಉಲ್ಲೇಖಿಸಲಾಗಿದೆಯಂತೆ. ಕಾಲದಲ್ಲಿ ಕಾಶಿಯು ಬಗೆಬಗೆಯ ಅಧ್ಯಯನಗಳ, ಸೃಜನಶೀಲ ಸಾಹಿತ್ಯದ, ಮನಸೆಳೆಯುವ ಕಲೆ ಮತ್ತು ಸಂಸ್ಕೃತಿಯ ಕೇಂದ್ರವಾಗುತ್ತಂತೆ. ಸ್ಕಂದ ಪುರಾಣದ ಕಾಶೀಖಂಡದಲ್ಲಿ ಶಿವನೇ ಕಾಶಿ ನನ್ನ ಪ್ರಿಯವಾದ ಸ್ಥಳಎಂದು ಹೇಳುತ್ತಾನೆ. ವನವಾಸದಲ್ಲಿದ್ದಾಗ ಪಾಂಡವರು ಕಾಶಿಗೆ ಭೇಟಿ ನೀಡಿದ್ದಾರಂತೆ. ಗರುಡ ಪುರಾಣದ ಪ್ರಕಾರ ಕಾಶಿಗೆ ಭೇಟಿ ನೀಡಿದರೆ ಮೋಕ್ಷ ಖಂಡಿತ.
ವಾರಣಾಸಿಯಲ್ಲಿ ಉತ್ಖನನ ನಡೆಸಿದ ಪುರಾತತ್ವ ಶಾಸ್ತ್ರಜ್ಞರು ಕ್ರಿಸ್ತ ಶಕ ಪೂರ್ವ 11-12 ಶತಮಾನದಷ್ಟು ಹಿಂದೆಯೇ ಇಲ್ಲಿನ ಗಂಗಾನದಿ ಬಯಲು ಪ್ರದೇಶದಲ್ಲಿ ಜನವಸತಿಯಿದ್ದುದನ್ನು ಪತ್ತೆ ಹಚ್ಚಿದ್ದಾರೆ. ಕ್ರಿಪೂ ಎಂಟನೇ ಶತಮಾನದಲ್ಲಿದ್ದ ಪಾಶ್ರ್ವನಾಥ ತೀರ್ಥಂಕರನು ವಾರಣಾಸಿಯಲ್ಲಿಯೇ ವಾಸಿಸಿದ್ದನಂತೆ. ಗೌತಮ ಬುದ್ಧ, ಚೀನಾ ಯಾತ್ರಿಕ ಹ್ಯೂಯೆನ್ ತ್ಸಾಂಗ್, ಆದಿ ಶಂಕರರು, ಮತ್ತು ಗುರುನಾನಕರು,  ಕಾಶಿಗೆ ಭೇಟಿ ನೀಡಿದ ಪ್ರಮುಖರು. ಮೌರ್ಯರ ಕಾಲದಲ್ಲಿ ಈಗಿನ ತಕ್ಷಶಿಲಾದಿಂದ ಬಿಹಾರದ ಪಾಟಲೀಪುತ್ರವನ್ನು ಜೋಡಿಸುವ ರಸ್ತೆಯು ವಾರಣಾಸಿ ಮೂಲಕ ಹಾದುಹೋಗುತ್ತಿತ್ತು. ಭಕ್ತಿ ಪಂಥದ ಅನೇಕ ಕವಿಗಳು ಇಲ್ಲಿದ್ದರು, ಅವರಲ್ಲಿ ಕಬೀರ ಮತ್ತು ರವಿದಾಸ ಮುಖ್ಯರು. ಅಕ್ಬರನು ಕಟ್ಟಿಕೊಟ್ಟ ಎರಡು ದೇವಸ್ಥಾನಗಳು ಈಗಲೂ ಇಲ್ಲಿವೆ. ಮಾರ್ಕ ಟ್ವೈನ್ ಅವನ ಪ್ರಕಾರವಾರಣಾಸಿಯು ಇತಿಹಾಸಕ್ಕಿಂತ ಹಳತಾದುದು, ಪರಂಪರೆಗಳಿಗಿಂತ ಪುರಾತನವಾದುದು, ಐತಿಹ್ಯಗಳಿಗಿಂತ ಹಿಂದಿನದು. ಇವೆಲ್ಲವನ್ನೂ ಒಟ್ಟುಗೂಡಿಸಿದರೂ ಅವುಗಳಿಗಿಂತ ಎರಡು ಪಟ್ಟು ಹಳತು ವಾರಣಾಸಿ. ಸ್ಥಗಿತಗೊಂಡಂತಿದ್ದರೂ ಸ್ಥಗಿತಗೊಳ್ಳದಿರುವ ವಾರಣಾಸಿಯನ್ನು ನೋಡುವುದು ಒಂದು ವಿಶಿಷ್ಟ ಅನುಭವ.
ಮೈಸೂರರಸರು ಕನ್ನಡಿಗರಿಗಾಗಿ ಇಲ್ಲೊಂದು ಘಾಟ್ ಕಟ್ಟಿಸಿದ್ದರು. ಅದರ ಸುತ್ತಲಿನ ಜಾಗವನ್ನು ಯಾರ್ಯಾರೋ ಅಪಹರಿಸಿದ್ದರಿಂದ ಅದರೊಳಗೆ ಇವತ್ತು ಹೋಗುವುದೇ ಕಷ್ಟವಾಗಿದೆ. ಬಿ ಎಚ್ ಯು ವಿನಲ್ಲಿ ಒಂದು ಕನ್ನಡ ಪೀಠವಿದ್ದು ಅದರ ಬಾಗಿಲೀಗ ಮುಚ್ಚಿ ಅಲ್ಲಿಯೂ ಬೆಳಕಿಲ್ಲವಾಗಿದೆ.